ಶಂಭೋ ಶಿವ ಶಂಕರ ಮನರಂಜನೆಗಾಗಿ 3/5 ***
Posted date: 18 Sun, Dec 2022 11:36:00 AM
ಶಂಭು, ಶಿವ ಮತ್ತು ಶಂಕರ ಈ ಮೂವರು ಬಾಲಾಪರಾಧಿಗಳು. ಇವರ ಜೀವನದಲ್ಲಿ ನಡೆಯುವ ಟ್ವಿಸ್ಟ್ ಅಂಡ್ ಟರ್ನ್ ಗಳೇ ಈವಾರ ತೆರೆಕಂಡಿರುವ ಶಂಭೋಶಿವಶಂಕರ ಚಿತ್ರದ ಹೈಲೈಟ್. ನಿರ್ದೇಶಕ ಶಂಕರ್  ಕೋನಮಾನಹಳ್ಳಿ ಅವರು ವಿಭಿನ್ನ  ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡು, ಅದನ್ನು ಹೇಳುವ ಶೈಲಿಯಲ್ಲೂ ವಿಭಿನ್ನತೆಯನ್ನು ಮೆರೆದಿದ್ದಾರೆ.
 
ನಿರ್ದೇಶಕನೊಬ್ಬ ರಿಯಲಿಸ್ಟಿಕ್ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡಬೇಕೆಂದು ಪೊಲೀಸ್ ಅಧಿಕಾರಿಯ ಬಳಿ ಹೋಗಿ ಒಳ್ಳೆಯ ಕಥೆ ಕೊಡುವಂತೆ ಕೇಳುತ್ತಾನೆ. ಆಗ ಆ ಅಧಿಕಾರಿ ಬಂದೀಖಾನೆಯಲ್ಲಿರುವ ಸುಂದರ ಯುವತಿಯ ಹತ್ತಿರ ನಿರ್ದೇಶಕನನ್ನು ಕರೆದುಕೊಂಡು ಹೋಗುತ್ತಾನೆ. 
 
ಅಲ್ಲಿಂದ ಚಿತ್ರದ ರಿಯಲ್ ಸ್ಟೋರಿ ಓಪನ್ ಆಗುತ್ತದೆ.  ನಾಯಕ ಶಂಭುಗೆ ಇಬ್ಬರು ಪ್ರಾಣ ಸ್ನೇಹಿತರು ಒಬ್ಬರಿಗೊಬ್ಬರು  ಪ್ರಾಣ ಕೊಡುವಷ್ಟರಮಟ್ಟಿಗೆ ಸ್ನೇಹಿತರು. ಅನಾಥರಾಗಿ ಬೆಳೆದ ಇವರು ತಮ್ಮ ಪರಿಸ್ಥಿತಿಗೆ ಕಾರಣರಾದವರನ್ನು ಮುಗಿಸಿರುತ್ತಾರೆ.  ಈ ಮೂವರು ಸ್ನೇಹಿತರಿಗೆ ಒಂದೇ ಹುಡುಗಿಯ ಮೇಲೆ ಪ್ರೀತಿ ಚಿಗುರಿದಾಗ ಕಥೆಯಲ್ಲಿ ಹೊಸ ಕುತೂಹಲ ಮೂಡುತ್ತದೆ.
 
ದುಷ್ಟರಿಗೆ ದುಷ್ಟರಾದ ಈ ಸ್ನೇಹಿತರು  ಕಷ್ಟದಲ್ಲಿರುವ ಬಡವರಿಗೆ ಸದಾ ಬೆನ್ನೆಲುಬಾಗಿ ನಿಲ್ಲುತ್ತಾರೆ. ಇದೇ ಕಾರಣಕ್ಕೆ ಕಳ್ಳತನ, ಕೊಲೆಯನ್ನೂ  ಮಾಡಬೇಕಾಗುತ್ತದೆ.  ಆ ಕೊಲೆ ನಾಯಕಿಯ ಜೀವನದಲ್ಲಿ ಬಿರುಗಾಳಿ ಎಬ್ಬಿಸುತ್ತದೆ. ಮುಂದೆ ನಡೆಯುವ ಕಥೆಯೇ ರೋಚಕ.  ಚಿತ್ರದ ಆರಂಭದಲ್ಲಿ ತೋರಿಸುವ  ಚೇಸಿಂಗ್ ದೃಶ್ಯಕ್ಕೆ ಅಂತ್ಯದಲ್ಲಿ ಮುಕ್ತಾಯ ನೀಡುವ ನಿರ್ದೇಶಕನ ಜಾಣ್ಮೆ  ಪ್ರೇಕ್ಷಕರಿಗೆ ಇಷ್ಟವಾಗುತ್ತದೆ.
 
ನಾಯಕ ಅಭಯ್ ಪುನೀತ್  ಒಬ್ಬ ಭರವಸೆಯ ನಾಯಕನಾಗಿ ಮಿಂಚಿದ್ದಾರೆ. ಸಸ್ಪೆನ್ಸ್, ಲವ್ ಕ್ರೈಂ ಸ್ಟೋರಿಗೆ ತನ್ನ ಅಭಿನಯದ ಮೂಲಕ ಜೀವ ತುಂಬಿದ್ದಾರೆ. ಎಮೋಷನಲ್ ದೃಶ್ಯಗಳಲ್ಲಿ ಮತ್ತು ರೋಮ್ಯಾಂಟಿಕ್ ಹಾಡುಗಳಲ್ಲಿ ಉತ್ತಮ ಅಭಿನಯ ನೀಡುವ ಮೂಲಕ  ಭರವಸೆ ಮೂಡಿಸಿದ್ದಾರೆ.
 
ಆರಂಭದಲ್ಲಿ ಖೈದಿಯಾಗಿ ಪ್ರೇಕ್ಷಕರಿಗೆ ದರ್ಶನ ನೀಡುವ  ನಾಯಕಿ ಸೋನಾಲ್ ಮೊಂಟಾರೊ, ಜೈಲಿಗೆ ಬರಲು ಕಾರಣವೇನು ಎಂದು ತಿಳಿಯಲು ನೀವು ಚಿತ್ರವನ್ನು ನೋಡಲೇಬೇಕು.  ಪೊಲೀಸ್ ಅಧಿಕಾರಿಯಾಗಿ ನಟ  ಶಶಿಕುಮಾರ್ ತನ್ನ ಹಳೇ ಚಿತ್ರಗಳನ್ನು ನೆನಪಿಸುತ್ತಾರೆ. 
 
ನಾಯಕ ಶಂಭು ಸ್ನೇಹಿತರಾದ  ರೋಹಿತ್ ಹಾಗೂ ರಕ್ಷಿತ್ ಕೂಡ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಹಿತನ್ ಹಾಸನ್  ಅವರ ಸಂಗೀತ ನಿರ್ದೇಶನ ಕಥೆಗೆ ಹೊಸ ಮೆರೆಗನ್ನ ಕೊಟ್ಟಿದೆ. 
 
ವೀಕೆಂಡ್ ನಲ್ಲಿ  ಉತ್ತಮ ಮನರಂಜನೆಗಾಗಿ ನೋಡಬಹುದಾದ ಚಿತ್ರ ಶಂಭೋ ಶಿವಶಂಕರ  ಪ್ರೇಕ್ಷಕರಿಗೆ ಹೊಸ ಅನುಭವವನ್ನು ನೀಡುತ್ತದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed